ಚಿಕ್ಕಮಗಳೂರು: ಅಂದಾಜು 1 ಕೋಟಿಗೂ ಅಧಿಕ ಮೌಲ್ಯ ಎರಡು ತಲೆ ಮಣ್ಣು ಮುಕ್ಕ ಹಾವನ್ನ (Red Sand Boa) ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಸಿಐಡಿ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ನಗರದ (Chikkamagaluru City) ವಾಜಪೇಯಿ ಲೇ ಔಟ್ ಬಡಾವಣೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನ ಆಂಧ್ರ ಮೂಲದ ವಂಶಿಕೃಷ್ಣ, ಆರೀಫ್ ಬಾಷಾ ಹಾಗೂ ಕರ್ನಾಟಕ ಶಿವಮೊಗ್ಗ ಹಾಗೂ ತುಮಕೂರು ಮೂಲದ ಯತೀಶ್, ಷಫಿ ಹಾಗೂ ಆರೀಫ್ ಭಾಷಾ ಎಂದು ಗುರುತಿಸಲಾಗಿದೆ.
ಬಂಧಿತರಿಂದ 1 ಸ್ವಿಫ್ಟ್ ಕಾರು, 1 ವ್ಯಾಗ್ನರ್ ಕಾರು ಹಾಗೂ 5 ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚನ್ನಗಿರಿಯಲ್ಲಿ ಸಿಕ್ಕ ಹಾವನ್ನ ಚಿಕ್ಕಮಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಐಡಿ ಅರಣ್ಯ ಸಂಚಾರ ದಳದ ಬಲೆಗೆ ಬಿದ್ದಿದ್ದಾರೆ. ಆರೋಪಿ ಯತೀಶ್ ಪ್ರಕರಣ ಕಿಂಗ್ ಪಿನ್ ಆಗಿದ್ದು ಆಂಧ್ರ ಮೂಲದ ವ್ಯಕ್ತಿಗಳಿಂದ ವಿದೇಶಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಈ ಎರಡು ತಲೆ (ಮಣ್ಣು ಮುಕ್ಕ) ಹಾವು ಮೆಟಲ್ ಡಿಟೆಕ್ಟರ್ ಗೂ ಡಿಟೆಕ್ಟ್ ಆಗಲ್ಲ ಎಂದು ಹೇಳಲಾಗುತ್ತದೆ. ಮಾಟ ಮಂತ್ರ, ಚಿನ್ನಾಭರಣ, ಡೈಮಂಡ್ ಸ್ಮಗ್ಲಿಂಗ್ ಗೆ ಬಳಕೆ ಮಾಡುತ್ತಾರೆ ಎಂದು ಹೇಳಲಾಗಿದೆ. ಚಿಕ್ಕಮಗಳೂರು ಅರಣ್ಯ ಸಂಚಾರ ದಳದ ಉಪನಿರೀಕ್ಷಕ ಬಾಬುದ್ದಿನ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.