ಬಂಟ್ವಾಳ, ಜು. 27: ಕೆಲವು ವರ್ಷಗಳ ಹಿಂದೆ ನ, ಸಂಘದಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿಕೊಂಡು ನನ್ನಿಂದಾಗುವ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ ಕಾರಣ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು ಎಂದು ಬಂಟ್ವಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಹೇಳಿದರು. ಇದನ್ನೂ ಓದಿ : ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

ಅವರು ಜು . 27 ರಂದು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ನಮ್ಮ ಸಂಘವು ತನ್ನದೇ ಆದ ಕಾರ್ಯವೈಖರಿಯಿಂದ ಜನಮೆಚ್ಚುಗೆಯನ್ನು ಗಳಿಸಿದೆ. ಕಾರ್ಯಕ್ರಮಗಳ ಸಂಘಟನೆಯಿಂದ ಹಿಡಿದು ಎಲ್ಲಾ ವಿಷಯಗಳಲ್ಲಿ ಮಾದರಿಯಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಯಾವುದಕ್ಕೂ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ನಿರ್ಗಮನಾಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘದ ಪೂರ್ವಾಧ್ಯಕ್ಷರುಗಳ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದಿಂದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ, ತಪ್ಪುಗಳು ಮಾನವ ಸಹಜ. ಹಾಗೇನಾದರೂ ಆಗಿದ್ದಲ್ಲಿ ಕ್ಷಮೆಯಿರಲಿ. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಇಪ್ಪತ್ತೊಂದನೇ ಮಹಾಸಭೆಯನ್ನು ಆಯೋಜಿಸಲಾಗಿದ್ದು, ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಅಂಗೀಕರಿಸಲಾಯಿತು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘದ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಅಧ್ಯಕ್ಷ ಚಂದ್ರಹಾಸ.ಡಿ.ಶೆಟ್ಟಿ ರಂಗೋಲಿ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ ಅರಳ, ಜೊತೆ ಕೋಶಾಧಿಕಾರಿ ಪ್ರತಿಭಾ.ಎ.ರೈ ಇವರನ್ನು ಗೌರವಿಸಲಾಯಿತು.

ತಾಂಬೂಲದ ಜೊತೆಗೆ ಸಂಘದ ಕಡತಗಳನ್ನು ವಿನಿಮಯ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. 2025-28ನೇ ಸಾಲಿಗೆ ಸಂಘದ ಉಪಾಧ್ಯಕ್ಷರಾಗಿ ಐತಪ್ಪ ಆಳ್ವ ಸುಜೀರುಗುತ್ತು, ಕಾರ್ಯದರ್ಶಿಯಾಗಿ ಸದಾನಂದ ಆಳ್ವ ಕಂಪ, ಕೋಶಾಧಿಕಾರಿಯಾಗಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕೋಶಾಧಿಕಾರಿಯಾಗಿ ಶ್ರೀವಿದ್ಯಾ.ಎ.ರೈ ಅಧಿಕಾರ ವಹಿಸಿಕೊಂಡರು.

ಸಂಘದ ಸ್ಥಾಪಕಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಪೂರ್ವಾಧ್ಯಕ್ಷರಾದ ಲೋಕನಾಥ ಶೆಟ್ಟಿ ಬಿ.ಸಿ.ರೋಡು, ವಿವೇಕ್ ಶೆಟ್ಟಿ ನಗ್ರಿಗುತ್ತು, ಹಿರಿಯರಾದ ರತ್ನಾಕರ ಶೆಟ್ಟಿ ಮುಂಡಡ್ಕಗುತ್ತು, ಶಾಂತರಾಮ ಶೆಟ್ಟಿ ಬೋಳಂತೂರು, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಪ್ರಫುಲ್ಲ.ಆರ್.ರೈ ಕಲ್ಲಾಜೆಗುತ್ತು, ಅಮ್ಮು ರೈ ಹರ್ಕಾಡಿ ಮತ್ತಿತರರು ಶುಭ ಹಾರೈಸಿದರು.

ಕಳೆದ ಅವಧಿಯ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರು ಹಾಗೂ ಸಂಘದ ಅಜೀವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಛೇರಿ ಸಿಬ್ಬಂದಿಗಳು ಸಹಕರಿಸಿದರು.