ಬಂಟ್ವಾಳ : ಇಂದಿನ ಯುವಕರು ಭಾರತದ ಭವ್ಯತೆಯನ್ನು ಹೆಚ್ಚಿಸಿ ದೇಶದ ಅಡಿಪಾಯವನ್ನು ಗಟ್ಟಿ ಮಾಡುವ ಛಲವನ್ನು ಹೊಂದಿರಬೇಕು, ಜೊತೆಗೆ ಸಮಾಜದ ಒಳಿತಿಗಾಗಿ ನಿರಂತರವಾಗಿ ಕಾಳಜಿಯನ್ನು ಹೊಂದಿದ ಸಂಘಟನೆಯು ದೇಶದ ಶಕ್ತಿ ಎಂಬುದಾಗಿ ಮಜಿ ವೀರಕಂಭ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶರ ಭಟ್ಟ ರಾಕೋಡಿ ಹೇಳಿದರು.
ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಮಜಿ ವೀರಕಂಭ ಇಲ್ಲಿಗೆ ಯುವಶಕ್ತಿ ಸೇವಾ ಪಥ ದ.ಕ ವತಿಯಿಂದ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸೇವೆಯಲ್ಲಿ ಯಾವುದೇ ರೀತಿಯ ಸ್ವಾರ್ಥ ಇರಬಾರದು ನಿಸ್ವಾರ್ಥ ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅದಕ್ಕೆ ತಕ್ಕನಾದ ಫಲವು ಖಂಡಿತ ದೊರಕುತ್ತದೆ, ಇಂದಿನ ಯುವಕರು ಒಂದಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವಾಮನೋಭಾವನೆಯಿಂದ ಒಂದು ಸಂಘಟನೆ ಭಾವನೆಯನ್ನು ಬೆಳೆಸಿ ತನ್ನ ಮಿತ್ರ ಸಂಸ್ಥೆಗಳ ಮೂಲಕ ಬೆಳಗಿದ ಒಂದು ಸಂಸ್ಥೆ ಎಂದರೆ ಅದು ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ. ತನ್ನ ಹಲವು ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡ ಈ ಸಂಸ್ಥೆಯು ಅಗತ್ಯ ಉಳ್ಳವರಿಗೆ ತುರ್ತು ರಕ್ತ ಒದಗಿಸುವಿಕೆ, ಅನಾರೋಗ್ಯವಂತರಿಗೆ ಸಹಾಯ,ನಿರಾಶ್ರಿತರಿಗೆ ಮನೆ ನಿರ್ಮಾಣ, ಕ್ಯಾನ್ಸರ್ ಪೀಡಿತರಿಗೆ ಕೇಶದಾನ, ನಿರುದ್ಯೋಗಿಗಳಿಗೆ ಉದ್ಯೋಗದ ಮಾಹಿತಿ ಒದಗಿಸುವ ಮೂಲಕ ಅವರ ಪಾಲಿನ ಆಶಾಕಿರಣವಾಗಿದೆ.
ಯುವಶಕ್ತಿ ಸೇವಾ ಪಥದ ಸದಸ್ಯರು ತಮ್ಮ ಸಂಪಾದನೆಯ ಕಿಂಚಿತ್ತು ಭಾಗವನ್ನು ಸಮಾಜ ಸೇವೆಗೆ ಮೀಸಲಿಡುವ ನಿರ್ಧಾರವನ್ನು ಮಾಡಿದ್ದು ಸಮಾಜದ ಬಗ್ಗೆ ವಿಶೇಷ ಕಾಳಜಿಯುಳ್ಳ ಸದಸ್ಯರ ಒಂದು ತಂಡವಾಗಿದೆ, ಅದರಂತೆ ಸದಸ್ಯರು ತಮ್ಮ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಮುಂತಾದ ವಿಶೇಷ ಕಾರ್ಯಕ್ರಮಗಳ ನಿಮಿತ್ತ ಸಂಘಕ್ಕೆ ನೀಡಿದ ಗೌರವಧನವನ್ನು ಒಟ್ಟು ಸೇರಿಸಿ “ಶುಭನಿಧಿ ಸೇವಾಭಿಯಾನ’ ಎಂಬ ಕಾರ್ಯಕ್ರಮದ ಮೂಲಕ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡುತ್ತಿದ್ದೇವೆ ಎಂಬುದಾಗಿ ಸಂಚಾಲಕರಾದ ವಿಜೇತ್ ಶೆಟ್ಟಿ ಕಡೇಶಿವಾಲಯ ಸಂಘಟನೆ ಬಗ್ಗೆ ವಿವರ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯು ಪ್ರಾರಂಭವಾಗಿ ಕೇವಲ ಎರಡು ವರ್ಷಗಳಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದು ಅವರ ಉತ್ತಮ ಕೆಲಸಗಳನ್ನು ಗುರುತಿಸಿ ಶಾಲಾ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾತೃಸಂಸ್ಥೆ ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷರಾದ ದೇವಿಪ್ರಸಾದ್ ಬೇಂಗದಡಿ,ಗೋಳ್ತಮಜಲಿನ ಓಂ ಶ್ರೀ ಸಾಯಿ ಗಣೇಶ ಸೇವಾ ಟ್ರಸ್ಟ್ ನ ಸದಸ್ಯರಾದ ರಾಮಚಂದ್ರ ಸಾಲಿಯಾನ್, ತಿಲಕ್ ಗೋಳ್ತಮಜಲು, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ, ಪತ್ರಕರ್ತ ಮೌನೇಶ್ ವಿಶ್ವಕರ್ಮ, ಶಾಲಾ ಹಿರಿಯ ವಿದ್ಯಾರ್ಥಿ ಉಮೇಶ್ ಸುವರ್ಣ, ಸೇವಾಪಥದ ಪ್ರಮುಖರುಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಯುವಶಕ್ತಿ ಸೇವಾ ಪಥದ ಸದಸ್ಯರು, ಓಂ ಶ್ರೀ ಸಾಯಿ ಗಣೇಶ್ ಸೇವಾ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿಗಳು,ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಬೆನಡಿಟ್ಟ ಆಗ್ನೇಸ್ ಮಂಡೋನ್ಸ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಇಂದು ಶೇಖರ್ ಕುಲಾಲ್ ವಂದಿಸಿ. ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು.