ಚಿತ್ರದುರ್ಗ: ಹೆಚ್‌ಐವಿ (HIV) ಪೀಡಿತನೆಂಬ ಕಾರಣಕ್ಕೆ ಸ್ವಂತ ತಮ್ಮನನ್ನೇ ಅಕ್ಕ ತನ್ನ ಗಂಡನೊಂದಿಗೆ ಸೇರಿ ಕೊಲೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.    ಇದನ್ನೂ ಓದಿ :  ಪಚ್ಚಿನಡ್ಕ : ಆಟಿದ ಕೂಟ

ಮಲ್ಲಿಕಾರ್ಜುನ್ (23) ಕೊಲೆಯಾದ ಸಹೋದರ, ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ಕೊಲೆ ಆರೋಪಿ. ದುಮ್ಮಿ ಗ್ರಾಮದ ನಾಗರಾಜ್‌ ಎನ್ನುವವರ ಪುತ್ರ ಮಲ್ಲಿಕಾರ್ಜುನ್‌ ಬೆಂಗಳೂರಿನ (Bengaluru) ಗಾರ್ಮೆಂರ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಇದೇ ಜುಲೈ 23ರಂದು ತನ್ನ ಸ್ವಗ್ರಾಮವಾದ ದುಮ್ಮಿಗೆ ಕಾರಲ್ಲಿ ಸ್ನೇಹಿತರೊಂದಿಗೆ ಬರುತ್ತಿದ್ದ‌. ಆಗ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ಆದ ಕಾರಿನ ಅಪಘಾತದಲ್ಲಿ ಆತನ ಕಾಲು ಮುರಿವಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದ.

ಅಪಘಾತಗೊಂಡಿದ್ದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ನೀಡಲಾಗಿತ್ತು. ರಕ್ತ ಪರೀಕ್ಷೆ ವೇಳೆ ಮಲ್ಲಿಕಾರ್ಜುನ್‌ಗೆ ಹೆಚ್‌ಐವಿ ಕಾಯಿಲೆ ಇದೆ ಅನ್ನೋದು ಗೊತ್ತಾಯಿತು. ಜುಲೈ 25ರಂದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯಿಂದ‌ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಅಂಬುಲೆನ್ಸ್‌ನಲ್ಲೇ ಮಲ್ಲಿಕಾರ್ಜುನನ್ನ ಅಕ್ಕನೇ ಕೊಲೆಗೈದಿದ್ದಾಳೆ. ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ಸೇರಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಅಂತ್ಯಕ್ರಿಯೆ ವೇಳೆ ಮಲ್ಲಿಕಾರ್ಜುನ್‌ನ ಕುತ್ತಿಗೆ ಮೇಲಿದ್ದ ಮಾರ್ಕ್‌ ಕಂಡು ಸಂಬಂಧಿಕರು ಹಾಗು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಮೃತನ ತಂದೆ ನಾಗರಾಜ್‌ ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ನೀಡಿರು. ತನಿಖೆ ವೇಳೆ ಮಲ್ಲಿಕಾರ್ಜುನ HIV ಪೀಡಿತ ಎಂಬ ಕಾರಣಕ್ಕೆ ಮರ್ಯಾದೆಗೆ ಅಂಜಿ ಸಹೋದರಿಯೇ ಹತ್ಯೆಗೈದಿರುವ ಸತ್ಯ ಬೆಳಕಿಗೆ ಬಂದಿದೆ.

ಅಂತರ್ಜಾತಿ ವಿವಾಹವಾಗಿದ್ದ ಮೃತನ ಸಹೋದರಿ ನಿಶಾ ಆಸ್ತಿ ಆಸೆಗೆ ಕೊಲೆಗೈದಿರುವ ಆರೋಪ ಕೂಡ ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಿಂದ ಆಗ್ರಹ ಕೇಳಿಬಂದಿದೆ. ಈಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಶಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.