ಗದಗ: ಲಕ್ಕುಂಡಿಯ ಮನೆಯೊಂದರಲ್ಲಿ ಸಿಕ್ಕಿರುವ ಬೆಲೆಬಾಳುವ ವಸ್ತುಗಳು ನಿಧಿಯಲ್ಲ, ಬದಲಾಗಿ ಹಿಂದಿನ ಕಾಲದಲ್ಲಿ ಮನೆಯ ಹಿರಿಯರು ಅಡುಗೆ ಕೋಣೆಯಲ್ಲಿ ಕೂಡಿಟ್ಟಿದ್ದ ಆಭರಣಗಳು ಎಂದು ಧಾರವಾಡದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕ ರಮೇಶ್ ಮೂಲಿಮನಿ ಸತ್ಯ ಬಿಚ್ಚಿಟ್ಟಿದ್ದಾರೆ.
ಘಟನೆಯ ಕುರಿತು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಮಾಧ್ಯಮಗಳಲ್ಲಿ ಇದನ್ನು ನಿಧಿ ಎಂದು ಹೇಳಲಾಗಿದೆ. ಆದರೆ, ಇದು ನಿಧಿಯಲ್ಲ. ಸಿಕ್ಕಿರುವ ಆಭರಣಗಳಲ್ಲಿ ಬಹುತೇಕ ಮುರಿದುಹೋಗಿವೆ. ಹಿಂದಿನ ಕಾಲದಲ್ಲಿ ಟ್ರೆಜರಿ ಅಥವಾ ಬ್ಯಾಂಕ್ ವ್ಯವಸ್ಥೆ ಇಲ್ಲದಿದ್ದಾಗ, ನಮ್ಮ ಅಜ್ಜ-ಮುತ್ತಜ್ಜರು ಅಡುಗೆ ಮನೆಯ ಅಡಕಲು ಗಡಿಗೆ ಅಥವಾ ಒಲೆಯ ಬಳಿ ಬೆಲೆಬಾಳುವ ವಸ್ತುಗಳನ್ನು ಹೂತಿಡುವ ಪದ್ಧತಿ ಇತ್ತು. ಅದೇ ರೀತಿಯಲ್ಲಿ ಈ ವಸ್ತುಗಳು ಈಗ ಪತ್ತೆಯಾಗಿವೆ,” ಎಂದು ವಿವರಿಸಿದರು.
ಈ ಬಗ್ಗೆ ಗದಗ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಅವರೊಂದಿಗೆ ಮಾತನಾಡಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಎಡಿಸಿ ಮತ್ತು ತಹಶೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ನಡೆಸಿ, ಸಿಕ್ಕ ಆಭರಣಗಳನ್ನು ತೂಕ ಹಾಕಿ ಸುರಕ್ಷಿತವಾಗಿ ಟ್ರೆಜರಿಯಲ್ಲಿ (ಖಜಾನೆ) ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆಭರಣಗಳು ಸಿಕ್ಕ ತಕ್ಷಣ ಅದನ್ನು ಮುಚ್ಚಿಟ್ಟುಕೊಳ್ಳದೇ, ದೇವರ ಮುಂದಿಟ್ಟು ಸರ್ಕಾರಕ್ಕೆ ಮಾಹಿತಿ ನೀಡಿದ ಕುಟುಂಬದ ಮತ್ತು ಯುವಕನ ಪ್ರಾಮಾಣಿಕತೆಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು. “ಇಂದಿನ ಕಾಲದಲ್ಲಿ ಒಂದು ರೂಪಾಯಿ ಸಿಕ್ಕರೂ ಯಾರೂ ಬಿಡುವುದಿಲ್ಲ. ಅಂತಹುದರಲ್ಲಿ ಇಷ್ಟು ಬಂಗಾರ ಸಿಕ್ಕರೂ ಆಸೆ ಪಡದೆ ಸರ್ಕಾರಕ್ಕೆ ಒಪ್ಪಿಸಿರುವುದು ದೊಡ್ಡ ಕೆಲಸ. ಈ ಪ್ರಾಮಾಣಿಕತೆಗಾಗಿ ಸರ್ಕಾರ ಆ ಕುಟುಂಬಕ್ಕೆ ಸೂಕ್ತ ಪ್ರೋತ್ಸಾಹ ಅಥವಾ ಬಹುಮಾನ ನೀಡಬೇಕು,” ಎಂದು ಅವರು ಮನವಿ ಮಾಡಿದರು.
ಇದು ಕೇವಲ ಅಡುಗೆ ಮನೆಯಲ್ಲಿ ಸಿಕ್ಕಿರುವ ವಸ್ತುಗಳಾಗಿದ್ದು, ಇದಕ್ಕಾಗಿ ದೊಡ್ಡ ಮಟ್ಟದ ಉತ್ಖನನ ಬೇಕಿಲ್ಲ. ಆದರೆ ಇತಿಹಾಸದ ದೃಷ್ಟಿಯಿಂದ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಅಧಿಕಾರಿಗಳು ಪರಿಶೀಲನೆ ನಡೆಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಆರಂಭದಲ್ಲಿ ಕುಟುಂಬಸ್ಥರು ಮತ್ತು ಯುವಕರು ಪ್ರಾಮಾಣಿಕವಾಗಿ ಚಿನ್ನವನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದರು. ಆದರೆ, ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, “ಇದು ಐತಿಹಾಸಿಕ ನಿಧಿಯಲ್ಲ, ಇಲ್ಲಿ ಯಾವುದೇ ಉತ್ಖನನ ನಡೆಸುವ ಅಗತ್ಯವಿಲ್ಲ, ಇದು ಮನೆಯವರ ಪೂರ್ವಜರಿಗೆ ಸೇರಿದ್ದು” ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಕುಟುಂಬಸ್ಥರ ಮನಸ್ಸು ಬದಲಾಗಿದೆ. “ಅಧಿಕಾರಿಗಳೇ ಇದು ಸರ್ಕಾರಿ ನಿಧಿಯಲ್ಲ ಎಂದು ಹೇಳಿದ್ದಾರೆ. ಹಾಗಿರುವಾಗ ಇದು ನಮ್ಮ ಹಿರಿಯರ ಆಸ್ತಿ. ನಮ್ಮ ಚಿನ್ನವನ್ನು ನಮಗೆ ವಾಪಸ್ ಕೊಡಬೇಕು,” ಎಂದು ಮನೆಯ ಹಿರಿಯಜ್ಜಿ ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, “ಪುರಾತತ್ವ ಇಲಾಖೆಯವರು ಬಂದು ಇದು ನಿಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಾಮಾಣಿಕವಾಗಿ ಆಸ್ತಿ ಘೋಷಣೆ ಮಾಡಿದ ಕುಟುಂಬಕ್ಕೆ ಅವರ ಹಿರಿಯರ ಆಸ್ತಿಯನ್ನು ವಾಪಸ್ ನೀಡಬೇಕು,” ಎಂದು ಆಗ್ರಹಿಸಿದ್ದಾರೆ.
ಸದ್ಯ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಅವರ ನೇತೃತ್ವದಲ್ಲಿ ಆಭರಣಗಳನ್ನು ತೂಕ ಹಾಕಿ ಸುರಕ್ಷಿತವಾಗಿ ಖಜಾನೆಯಲ್ಲಿ ಇರಿಸಲಾಗಿದ್ದು, ಇದು ನಿಧಿಯೋ ಅಥವಾ ಪೂರ್ವಜರ ಆಸ್ತಿಯೋ ಎಂಬ ತಾಂತ್ರಿಕ ಅಂಶಗಳ ಆಧಾರದ ಮೇಲೆ ಮುಂದಿನ ನಿರ್ಧಾರವಾಗಬೇಕಿದೆ.
