ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಕರ್ನಾಟಕಕ್ಕೆ ಎರಡು ಹೊಸ ರೈಲು ಮಾರ್ಗಗಳನ್ನು ಘೋಷಿಸಿದ್ದಾರೆ. ಆಲಮಟ್ಟಿ-ಯಾದಗಿರಿ ಮತ್ತು ಭದ್ರಾವತಿ-ಚಿಕ್ಕಜಾಜೂರು ಮಾರ್ಗಗಳ ಸಮೀಕ್ಷೆಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ ಮಧ್ಯ ಹಾಗೂ ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈ ಯೋಜನೆಗೆ 5.87 ಕೋಟಿ ರೂ. ಮೀಸಲಿಡಲಾಗಿದೆ, ಇದು ಸಂಪರ್ಕ ಸುಧಾರಣೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ
ಒಂದು ಮಾರ್ಗ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಆಲಮಟ್ಟಿ – ಯಾದಗಿರಿ, ಮತ್ತೊಂದು ಮಾರ್ಗ ಅರೆ ಮಲೆನಾಡಿಗೆ ಸಂಬಂಧಿಸಿದ ಭದ್ರಾವತಿ – ಚಿಕ್ಕಜಾಜೂರ್ ನಡುವೆ ಚನ್ನಗಿರಿ ಮೂಲಕ. ಇನ್ನು ಈ ಎರಡು ರೈಲು ಮಾರ್ಗದಿಂದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಕೇಂದ್ರ ಸಚಿವ ಸ್ವತಃ ವಿ ಸೋಮಣ್ಣ ಟ್ವೀಟ್ ಮಾಡಿದ್ದು, ” ಕರ್ನಾಟಕಕ್ಕೆ ಒಳ್ಳೆಯ ಸುದ್ದಿ. ನಮ್ಮ ರಾಜ್ಯದ ಹೆಚ್ಚುತ್ತಿರುವ ಅಗತ್ಯಗಳನ್ನು ಗುರುತಿಸಿ, ಎರಡು ಹೊಸ ರೈಲು ಮಾರ್ಗಗಳಿಗೆ ಅಂತಿಮ ಸ್ಥಳ ಸಮೀಕ್ಷೆಗಳನ್ನು ಅನುಮೋದಿಸಲಾಗಿದೆ ” ಎಂದು ತಿಳಿಸಿದ್ದಾರೆ. ಸುಧಾರಿತ ಸಂಪರ್ಕ ಮತ್ತು ವೇಗವರ್ಧಿತ ಪ್ರಾದೇಶಿಕ ಅಭಿವೃದ್ಧಿಯತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದಿರವ ವಿ ಸೋಮಣ್ಣ ಅವರು ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಭದ್ರಾವತಿ – ಚಿಕ್ಕಜಾಜೂರು ರೈಲು ಮಾರ್ಗದಿಂದ ಅಡಕೆ ನಾಡು ಚನ್ನಗಿರಿಯ ರೈಲು ಸಂಪರ್ಕ ಸಿಗಲಿದೆ, ತುಮ್ಕೋಸ್ ಅಡಕೆ ಮಾರುಕಟ್ಟೆ ಹಿನ್ನೆಲೆ ಆಮದು ರಫ್ತು ಸಾಗಣೆಗೆ ಅನುಕೂಲ. ಹೊದಿಗೆರೆಯಲ್ಲಿ ಶಿವಾಜಿ ತಂದೆ ಷಹಾಜಿ ರಾಜೇ ಬೋಸ್ಲೆ ಸಮಾಧಿ, ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆ ಇದ್ದು ಪ್ರವಾಸಿರಿಗೆ ಅನುಕೂಲವಾಗಲಿದೆ.
ಆಲಮಟ್ಟಿ – ಯಾದಗಿರಿ ರೈಲು ಮಾರ್ಗವನ್ನು ಮುದ್ದೇಬಿಹಾಳ, ತಾಳಿಕೋಟೆ, ಸುರಪುರ ಮೂಲಕ ನಿರ್ಮಿಸುವ ಸಾಧ್ಯತೆ ಇದೆ. ಈ ಮೂಲಕ ವಿಜಯಪುರ ಪ್ರಮುಖ ತಾಲೂಕು ಮುದ್ದೇಬಿಹಾಳಕ್ಕೆ ರೈಲು ಸಂಪರ್ಕ ಸಿಗಲಿದೆ. ಸದ್ಯ ಮುದ್ದೇಬಿಹಾಳ ತಾಲೂಕು ಜನ ಆಲಮಟ್ಟಿ ನಿಲ್ದಾಣದಿಂದ ರೈಲು ಸಂಚಾರ ಮಾಡುತ್ತಿದ್ದಾರೆ.