ಟೆಹ್ರಾನ್: ಇರಾನ್ನಲ್ಲಿ ಭಾರತದ 3 ಯುವಕರನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಬಿಡುಗಡೆಗಾಗಿ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರದ ಏಜೆಂಟ್ ಒಬ್ಬ ಈ ಮೂವರನ್ನು ದುಬೈ-ಇರಾನ್ ಮಾರ್ಗದ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸುವುದಾಗಿ ಹೇಳಿದ್ದ. ಅವರಿಗೆ ಇರಾನ್ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವುದಾಗಿ ಏಜೆಂಟ್ ಭರವಸೆ ನೀಡಿದ್ದ. ಆದರೆ ಅವರು ಅಲ್ಲಿಗೆ ತೆರಳುತ್ತಿದ್ದಂತೆ ಅಪಹರಣಕಾರರು ಯುವಕರನ್ನು ಅಪಹರಿಸಿದ್ದಾರೆ. ಬಿಡುಗಡೆಗೆ 1 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ರಾಯಭಾರ ಕಚೇರಿಯು ಯುವಕರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಪತ್ತೆಗೆ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುತ್ತಿದೆ.
ಅಪಹರಣಕಾರರು ನಮಗೆ ವೀಡಿಯೋ ಕಳುಹಿಸಿದ್ದಾರೆ. ವೀಡಿಯೋದಲ್ಲಿ ಯುವಕರನ್ನು ಹಗ್ಗದಿಂದ ಕಟ್ಟಲಾಗಿದೆ. ಅಲ್ಲದೇ ಅವರ ತೋಳುಗಳಿಂದ ರಕ್ತ ಬರುತ್ತಿದೆ. ಹಣ ಕಳುಹಿಸದಿದ್ದರೆ ಅವರನ್ನು ಕೊಲ್ಲುವುದಾಗಿ ಅಪಹರಣಕಾರರು ಬೆದರಿಕೆ ಹಾಕಿದ್ದಾರೆ. ಫೋನ್ ಮೂಲಕ ನಮ್ಮ ಬಳಿ ಮಾತನಾಡುತ್ತಿದ್ದರು. ಮೇ 11 ರಿಂದ ನಮ್ಮ ಸಂಪರ್ಕದಲ್ಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಯುವಕರನ್ನು ವಿದೇಶಕ್ಕೆ ಕಳುಹಿಸಿದ್ದ ಏಜೆಂಟ್ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಮೇ 16 ರಂದು ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.