ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮವನ್ನು ಸಿ.ಎಂ. ಸಿದ್ಧರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳ ನಂತರವೂ ಸೌಲಭ್ಯಗಳಿಂದ ವಂಚಿತರಾಗಿರುವ ಜನರನ್ನು ಗುರುತಿಸುವ ಉದ್ದೇಶದಿಂದ ನಮ್ಮ ಸರ್ಕಾರ ಸಾಮಾಜಿಕ ಗಣತಿಯನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ, ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಸಾಮಾಜಿಕ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿದ್ದು, ಆದರೆ ಹಲವು ಕಾರಣದಿಂದ ಆ ವರದಿ ಇನ್ನೂ ಜಾರಿಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ ಜಾರಿಗೆ ಕ್ರಮಕೈಗೊಳ್ಳಲಾಗುವುದು. ಜಾತಿ ಜನಗಣತಿ ನಮ್ಮ ಪಕ್ಷದ ಸಿದ್ದಾಂತವೂ ಆಗಿದೆ. ದೇಶದಲ್ಲಿ ಜನಸಂಖ್ಯೆಯ ಗಣತಿಯೊಂದಿಗೆ ಜಾತಿ ಗಣತಿ ಕಾರ್ಯ 1930ರ ನಂತರ ಆಗಿಲ್ಲ. ಈಗ ಎಲ್ಲಾ ರಾಜ್ಯಗಳಲ್ಲಿ ಜಾತಿ ಗಣತಿ ಕುರಿತು ಚರ್ಚೆ ನಡೆಯುತ್ತಿದೆ.
ಹಿಂದುಳಿದವರಿಗೆ, ದಲಿತ- ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ದೊರೆಯಬೇಕೆಂಬುದು ಸಂವಿಧಾನ ರಚಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉದೇಶವಾಗಿತ್ತು. ಜನ ಅವಕಾಶಗಳಿಂದ ವಂಚಿತರಾಗಿರುವುದರಿಂದಲೇ ಅಸಮಾನತೆ ಸೃಷ್ಟಿಯಾಗಿದ್ದು, ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಮೂಲಕ ಕಲ್ಪಿಸಲು ಬಾಬಾ ಸಾಹೇಬರು ಪ್ರಯತ್ನಿಸಿದರು. ಸಾಮಾಜಿಕ ಜವಾಬ್ದಾರಿಯನ್ನು ಈ ತಲೆಮಾರಿನಲ್ಲಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಪೀಠಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ರಾಜ್ಯದಾದ್ಯಂತ ನಾವು ಮಾಡಿದ್ದೇವೆ.
ವಸತಿ ನಿಲಯಗಳಲ್ಲಿ ಕಲಿತವರು ಇಂದು ಅನೇಕ ಮಂದಿ ಉನ್ನತ ಸ್ಥಾನಗಳಲ್ಲಿದ್ದಾರೆ. ಈ ರೀತಿ ಉನ್ನತ ಹುದ್ದೆಗಳಲ್ಲಿರುವವರು ಸಮಾಜಕ್ಕೆ ಹಿಂತಿರುಗಿ ಕೊಡುಗೆ ನೀಡಬೇಕಾಗಿದೆ. ನೀವು ಯಾವ ಕ್ಷೇತ್ರದಲ್ಲಿದ್ದೀರಿ ಅಲ್ಲಿ ಸಮಾಜದ ದೀನ ದಲಿತರಿಗಾಗಿ ನಿಮ್ಮ ಕೈಯಿಂದಾಗುವಷ್ಟು ಸಹಾಯ ಮಾಡಿ. ಇದುವೇ ನೀವು ಸಮಾಜಕ್ಕೆ ನೀಡುವ ಕೊಡುಗೆ. ಸಮಾಜದ ಋಣ ತೀರಿಸಿದರೆ ನಮ್ಮ ಜೀವನ ಸಾರ್ಥಕ.
ನಮ್ಮ ಸಂವಿಧಾನ ಜಾರಿಯಾಗುವ ಮೊದಲೇ ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು. 1960 ರಲ್ಲಿ ನಾಗೇಗೌಡ ಸಮಿತಿ ರಚನೆಯಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರು ಆಯೋಗ ರಚಿಸಲಾಯಿತು. ವರದಿಗೆ ವಿರೋಧದ ನಡುವೆಯೂ ಜಾರಿಗೆ ತರಲಾಯಿತು. 1977 ರಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿನಿಲಯಗಳಲ್ಲಿ ಶೇ.75 ರಷ್ಟು ಹಿಂದುಳಿದ ಜಾತಿಗಳ ಮಕ್ಕಳಿದ್ದರೆ, ಶೇ.25 ರಷ್ಟು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮಕ್ಕಳಿದ್ದಾರೆ. 1,87,000 ವಿದ್ಯಾರ್ಥಿಗಳು ಇಂದು ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ನಾನು ಓದುವಾಗ ಮೀಸಲಾತಿ ವ್ಯವಸ್ಥೆ ಇಲ್ಲದಿದ್ದ ಕಾರಣ, ಉನ್ನತ ಶಿಕ್ಷಣಕ್ಕೆ ಅವಕಾಶ ದೊರಕಲಿಲ್ಲ. ಪಿಯುಸಿ, ಪದವಿ ಮಾಡುವ ಸಂದರ್ಭದಲ್ಲಿ ವಸತಿ ವ್ಯವಸ್ಥೆ ಇಲ್ಲದೇ, ನಾನೇ ಒಂದು ರೂಂ ಮಾಡಿಕೊಂಡು ಓದುತ್ತಿದ್ದೆ. ಆದ್ದರಿಂದ ವಿದ್ಯಾರ್ಥಿಗಳ ಕಷ್ಟಗಳ ಬಗ್ಗೆ ಅರಿತಿದ್ದ ನಾನು ವಿದ್ಯಾಸಿರಿ ಯೋಜನೆಯನ್ನು ಜಾರಿ ಮಾಡಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಹತ್ತನೆ ತರಗತಿಯಲ್ಲಿ ಓದುವ ಮಕ್ಕಳಿಗೆ ವಾರಕ್ಕೆ ಆರು ದಿನ ಮೊಟ್ಟೆ ನೀಡಲಾಗುತ್ತಿದೆ. ಅನ್ನಭಾಗ್ಯದಡಿ 5 ಕೆಜಿ ಅಕ್ಕಿ, ಕ್ಷೀರಭಾಗ್ಯ ಕಾರ್ಯಕ್ರಮ, ಬಡಮಕ್ಕಳಿಗೆ ಶೂ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೆ ತರಲಾಗಿದೆ ಎಂದರು.