ಬಂಟ್ವಾಳ: ದ.ಕ.ಜಿಲ್ಲೆಯ ಎಲ್ಲಾ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಭದ್ರತಾ ವ್ಯವಸ್ಥೆಯ ಬಗ್ಗೆ ಜಿಲ್ಲಾ ಪೋಲೀಸ್ ಇಲಾಖೆ ಪರಿಶೀಲನೆ ನಡೆಸಿ, ಸೂಕ್ತವಾದ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದರು.

ಅವರು ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ನಲ್ಲಿ ದ.ಕ.ಜಿಲ್ಲಾ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳ ಭದ್ರತೆಯ ಬಗ್ಗೆ ನಡೆದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಲ ದಿನಗಳ ಹಿಂದೆ ವಿಟ್ಲದಲ್ಲಿ ನಡೆದ ಬ್ಯಾಂಕ್ ಕಳವು ಪ್ರಕರಣದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಕ್ರಮಕೈಗೊಳ್ಳುವುದಕ್ಕೆ ಸಭೆಯಲ್ಲಿ ಎಸ್.ಪಿ.ಸೂಚನೆ ನೀಡಿದ್ದಾರೆ.

ಗ್ರಾಹಕರು ಮತ್ತು ಸಾರ್ವಜನಿಕರು ಬ್ಯಾಂಕ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಧಕ್ಕೆಯಾಗದಂತೆ, ಲಾಕರ್ ಗಳಲ್ಲಿ ಇಟ್ಟಿರುವ ಚಿನ್ನಾಭರಣ ಮತ್ತು ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮಾಡಿರುವ ಹಣಕ್ಕೆ ಸೂಕ್ತವಾದ ಭದ್ರತಾ ಕ್ರಮಗಳನ್ನು ವಹಿಸಿ ಅವರ ವಿಶ್ವಾಸಕ್ಕೆ ದ್ರೋಹ ಆಗದಂತೆ ನೋಡಿಕೊಳ್ಳುವುದು ಕರ್ತವ್ಯವಾಗಿದೆ. ಹಾಗಾಗಿ ಜವಬ್ದಾರಿ ಮತ್ತು ಕರ್ತವ್ಯ ಎರಡನ್ನು ಮರೆಯದೆ ಬ್ಯಾಂಕ್ ಗಳಲ್ಲಿ ಉತ್ತಮ ಗುಣಮಟ್ಟದ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸುವುದು ಮತ್ತು ಅಲರಾಂ ವ್ಯವಸ್ಥೆಯನ್ನು ಹೊಂದಿರುವುದು. ಜೊತೆಗೆ ಅಳವಡಿಸಲಾಗಿರುವ ಭದ್ರತಾ ವ್ಯವಸ್ಥೆಗಳು ಸರಿಯಾಗಿ ಕಾರ್ಯಿರ್ವಹಿಸುತ್ತದಾ ಎಂಬುದನ್ನು ಕಾಲಕಾಲಕ್ಕೆ ನೋಡಿಕೊಂಡಿರುವುದು ಅತ್ಯಂತ ಪ್ರಾಮುಖ್ಯತೆ ಪಡೆದಿದೆ ಎಂದು ಅವರು ತಿಳಿಸಿದರು.

ಇದರ ಜೊತೆಗೆ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಳ್ಳುವ ವ್ಯವಸ್ಥೆ ಮಾಡುವುದು ಒಳ್ಳೆಯ ವ್ಯವಸ್ಥೆ ಎಂದು ತಿಳಿಸಿದರು.

ಇಂತಹ ಪ್ರಮುಖವಾದ ವ್ಯವಸ್ಥೆಗಳನ್ನು ಬ್ಯಾಂಕ್ ಗಳು ಮತ್ತು ಸಹಕಾರಿ ಸಂಘಗಳು ಮಾಡಿಕೊಂಡು, ಪೋಲೀಸರಿಗೆ ಸಹಕಾರ ನೀಡಿ ಎಂದು ಅವರು ತಿಳಿಸಿದರು.

ಎಲ್ಲಾವನ್ನು ಪೋಲೀಸ್ ಇಲಾಖೆ ಅಥವಾ ಬೀಟ್ ಪೋಲೀಸರು ಓಡಾಡಿ ಎಲ್ಲವನ್ನು ತಡೆಯಲು ಸಾಧ್ಯವಾಗುತ್ತದೆ ಎಂಬುದು ಸಾಧ್ಯವಾಗದ ಮಾತು. ಎಲ್ಲವನ್ನೂ ಪೋಲೀಸರು ನಿಯಂತ್ರಣ ಮಾಡಲು ಕೂಡ ಸಾಧ್ಯವಿಲ್ಲ, ಹಾಗಾಗಿ ಕೆಲವೊಂದು ಅತೀ ಅಗತ್ಯವಾದ ಪ್ರಾಥಮಿಕ ಸೆಕ್ಯುರಿಟಿ ವ್ಯವಸ್ಥೆಗಳನ್ನು ಬ್ಯಾಂಕ್ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ, ಪುತ್ತೂರು ಡಿ.ವೈ.ಎಸ್.ಪಿ.ಅರುಣ್ ಎನ್.ಗೌಡ ಮತ್ತು ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ಹಾಗೂ ಜಿಲ್ಲೆಯ ಎಲ್ಲಾ ಪೋಲೀಸ್ ಅಧಿಕಾರಿಗಳು, 300 ಕ್ಕೂ ಅಧಿಕ ಬ್ಯಾಂಕ್ ಮ್ಯಾನೇಜರ್ ಗಳು ಭಾಗವಹಿಸಿ ಸಲಹೆ ನೀಡಿದರು.