ಬಂಟ್ವಾಳ: ಪ್ರಸ್ತುತ ಸನ್ನಿವೇಶದಲ್ಲಿ‘ಮಾದಕವ್ಯಸನ’ಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನತೆಯು ಮಾದಕ ವಸ್ತುಗಳ ಸೇವನೆಯಲ್ಲಿ ಮುಂದಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಇದು ಭವಿಷ್ಯದ ಸಮಾಜವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲ. ಆದ ಪ್ರಯುಕ್ತ ವಿದ್ಯಾರ್ಥಿಗಳು ಇದರ ಅಪಾಯವನ್ನು ಅರಿತುಕೊಂಡು ಕೂಡಲೇ ಜಾಗೃತರಾಗಿರಬೇಕೆಂದು ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗವರ್ಧನ್ ಡಿ.ಎಮ್. ಕರೆನೀಡಿದರು.
ಅವರು ಕಾಲೇಜಿನಲ್ಲಿ ಆಯೋಜಿಸಿದ್ದ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿರುವ ಅನುಕೂಲಗಳು, ಪದವಿ ಅಧ್ಯಯನದ ಅವಶ್ಯಕತೆ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಕ್ಷೇಮಪಾಲನ ಅಧಿಕಾರಿಗಳಾದ ಶ್ರೀ ಶಿವಣ್ಣ ಪ್ರಭು ಅವರು ಪಠ್ಯಕ್ರಮದ ಸ್ವರೂಪದ ಕುರಿತು ವಿವರಿಸಿದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ಕಾಶೀನಾಥ ಶಾಸ್ತ್ರಿ ಎನ್.ಎಸ್.ಎಸ್., ಎನ್.ಸಿ.ಸಿ. ಯೋಜನೆಗಳ ಉಪಯೋಗಗಳನ್ನು ತಿಳಿಸಿದರು.
ವಿದ್ಯಾರ್ಥಿನಿಯರಾದ ಹೇಮಲತಾ, ಶಾಖಾಂಬರಿ ಪ್ರಾರ್ಥಿಸಿದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸಹನಾ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಪ್ರಾಧ್ಯಾಪಕೇತರ ನೌಕರರು ಉಪಸ್ಥಿತರಿದ್ದರು.