ಬಂಟ್ವಾಳ, ಜು. 23: ತೆಂಗಿನಕಾಯಿಗೆ ಉತ್ತಮ ಧಾರಣೆ, ಕೃಷಿಕರಿಗೆ ಗುಣಮಟ್ಟದ ತೆಂಗಿನ ಗಿಡದ ಲಭ್ಯತೆ, ಸಿಯಾಳಕ್ಕೆ ಉತ್ತಮ ಮಾರುಕಟ್ಟೆ, ಉದ್ದೇಶದಿಂದ ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ. ಬಂಟ್ವಾಳ 2018ರಲ್ಲಿ ಅನುಷ್ಠಾನಕ್ಕೆ ಬಂದಿದೆ ಎಂದು ಸಹಕಾರಿ ಅಧ್ಯಕ್ಷ ರಾಜ್ ಬಂಟ್ವಾಳ್ ಹೇಳಿದ್ದಾರೆ.

ಸಹಕಾರಿ ಅಧ್ಯಕ್ಷ ರಾಜ್ ಬಂಟ್ವಾಳ್ ಮಾತನಾಡಿದರು

ಅವರು ಜು. 23 ರಂದು ಬಿ. ಸಿ. ರೋಡ್ ರಂಗೋಲಿ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೆಂಗಿನ ಸಿಪ್ಪೆ ಹುಡಿ ಮಾಡುವ ಯಂತ್ರವನ್ನು ಸ್ವತಃ ಖರೀದಿಸಿ ಸದಸ್ಯ ರೈತರಿಗೆ ಬಾಡಿಗೆಯಲ್ಲಿ ನೀಡುವ ಯೋಜನೆ ರೂಪಿಸಿದೆ.

ಐದು ವರ್ಷಗಳ ಹಿಂದೆ ವ್ಯವಹಾರ ಆರಂಭಿಸಿ ಹಂತ ಹಂತದಲ್ಲಿ ಪ್ರಗತಿ ಹೊಂದಿ 2023 – 24ರ ಸಾಲಿಗೆ 4.05 ಕೋಟಿ ವ್ಯವಹಾರ ಮಾಡಿ 2.89 ಲಕ್ಷ ನಿವ್ವಳ ಲಾಭ ಪಡೆದಿದೆ. ಸದಸ್ಯರಿಗೆ ಶೇ.6 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು. ಸದಸ್ಯರ ಸಲಹೆಯಂತೆ ಮುಂದಿನ ಆರ್ಥಿಕ ವರ್ಷದಿಂದ ತೆಂಗು ಉತ್ತಮ ಕೃಷಿಕ ಪುರಸ್ಕಾರ ನೀಡುವ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ಒಂದು ತೆಂಗಿನ ಮರ ಪ್ರಾಕೃತಿಕ ವಿಕೋಪದಿಂದ ಸತ್ತಲ್ಲಿ ಸರಕಾರದಿಂದ ರೂ. 5 ಸಾವಿರ ಪರಿಹಾರ, ಸ್ಥಳೀಯವಾಗಿ ಸಿಯಾಳವನ್ನು ಸಾರ್ವಜನಿಕವಾಗಿ ವಿತರಿಸಲು ರೈತರಿಗೆ ಆಯಾ ಗ್ರಾ.ಪಂ., ಪುರಸಭೆ ವ್ಯಾಪ್ತಿಯಲ್ಲಿ ಲೈಸನ್ಸ್ ನೀಡಲು ಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ವೇದಿಕೆಯಿಂದ ನಿರ್ದೇಶಕರಾದ ಶಶಿಕಲಾ ಕೃಷ್ಣ ಭಂಡಾರಿ ಭಕ್ತಂಪುರ, ಪ್ರೇಮನಾಥ ಶೆಟ್ಟಿ ಅಂತರ, ವಿಠಲ ಸಪಲ್ಯ ಬಿಕ್ರೋಡಿ ಮಾತನಾಡಿದರು.

ಸದಸ್ಯರಾದ ಪಿಯುಸ್ ಎಲ್. ರೋಡ್ರಿಗಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಲಹೆ ನೀಡಿದರು.

ನಿರ್ದೇಶಕರಾದ ಸದಾಶಿವ ಬಂಗುಲೆ, ನಾಗೇಶ್ ಕಲ್ಯಾರು, ಯಾದವ ದರ್ಖಾಸ್, ರಜತ್ ರಾಜ್ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಶರಣಪ್ಪ ಉಮರಗಿ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ಕಾರ್ಯದರ್ಶಿ ಹರ್ಷಿತ್ ಕುಮಾರ್ ಪಿ. ಲೆಕ್ಕಪತ್ರ ಮಂಡಿಸಿದರು.ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಳಿಕ ನಡೆದ ಎಲೆಚುಕ್ಕಿ ರೋಗ ನಿಯಂತ್ರಣ ಮಾಹಿತಿಯನ್ನು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಕೇದಾರನಾಥ್ ನೀಡಿದರು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜ ಇಲಾಖೆಯಿಂದ ಸಿಗುವ ಸಹಾಯಧನ ಸೌಲಭ್ಯ ವಿವರ ನೀಡಿದರು.

ಉಪನ್ಯಾಸಕ ಜಯಾನಂದ ಪೆರಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.