ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನ ಮಂದಿರದಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರಿದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ಮಾತನಾಡಿದರು

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಶಾಲೆಯ ಸ್ಥಾಪನೆ, ಬೆಳವಣಿಗೆಯ ಬಗ್ಗೆ ತಿಳಿಸುತ್ತಾ,“ಶಿಕ್ಷಣವೇ ದೇಶದಆಧಾರ ಸ್ತಂಭವಾಗಿದೆ. ನಮ್ಮತನವನ್ನು ತೊಡಗಿಸಿಕೊಂಡು ಈ ಶಿಕ್ಷಣ ಸಂಸ್ಥೆಯುಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಚಿಂತಕರ, ದೇಶಾಭಿಮಾನದ ಶಿಕ್ಷಣ ನೀಡಬೇಕು. ಜಗತ್ತಿನಎಲ್ಲಾ ದೇಶಗಳು ಬೋಧಿಸುವುದು ರಾಷ್ಟ್ರೀಯತೆಯ ಶಿಕ್ಷಣವನ್ನೇ. ಆದರೆ ಇಂದಿನ ಸರ್ಕಾರ ಅಂತಹ ಪಠ್ಯಗಳನ್ನು ಕೈ ಬಿಟ್ಟಿದೆ. ಆದರೆ ನಾವು ಅಂತಹ ದೃಷ್ಟಿಕೋನವನ್ನು ಮಕ್ಕಳಿಗೆ ನೀಡುತ್ತಿದ್ದೇವೆ. ಎಳೆ ಮಕ್ಕಳ ಹೃದಯಂಗಳದಲಿ ದೇಶಭಕ್ತಿ, ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಿ, ಅವರನ್ನೇ ರಾಷ್ಟ್ರದ ಶಕ್ತಿಯನ್ನಾಗಿಸುವ ಚಿಂತನೆಯ ನಿಟ್ಟಿನಲ್ಲಿ ಕಳೆದ 40 ವರ್ಷಗಳಿಂದ ಶಿಕ್ಷಣದ ಜೊತೆಜೊತೆಗೆ ಸಂಸ್ಕೃತಿ, ಸಂಸ್ಕಾರವು ನಮ್ಮ ಶಾಲೆಯು ನೀಡುತ್ತಾ ಬಂದಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳು ಹೆಚ್ಚು ಅರ್ಥೈಸಿಕೊಳ್ಳುವ ಜೊತೆಗೆ, ನಮ್ಮ ಸಂಸ್ಕೃತಿ, ಧರ್ಮ, ಜೀವನ ಮೌಲ್ಯಗಳನ್ನು ಬಲು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.”ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಪ್ರಜ್ವಲನೆ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಭವಿಷ್ಯದ ದಿಟ್ಟ ಭರವಸೆಯೊಂದಿಗೆ ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಯತ್ತ ಬಂದ 1ನೇ ತರಗತಿಯ ಪುಟಾಣಿಗಳನ್ನು ಅಧ್ಯಾಪಕ ವೃಂದದವರು ಪೂರ್ಣಕುಂಭ ಸ್ವಾಗತದೊಂದಿಗೆಕರೆತಂದರು. ನಂತರ ನೂತನವಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರು ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕವನ್ನಿಟ್ಟು, ಮಧುವ ತಿನ್ನಿಸಿ ಬಾಳು ಬೆಳಕಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಪವಿತ್ರವಾದಅಗ್ನಿಯನ್ನು ಪ್ರಜ್ವಲಿಸಿ, ಅತಿಥಿ ಅಭ್ಯಾಗತರು ಘೃತಾಹುತಿ ಮಾಡಿದರು. ನಂತರ ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಘೃತಾಹುತಿ ಮಾಡಿ, ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಕ್ಷತಾಲಕ್ಷ್ಮೀ, ಚಿನ್ಮಯಿ, ಆಶಿಕಾ, ಧನ್ಯ ಶ್ರಮಿಕಾ, ವೇದಮಂತ್ರ ಪಠಿಸಿದರು.
ವೇದಿಕೆಯಲ್ಲಿ ಮಂಗಳೂರು ಕ್ರೆಡಿಟ್ ಬ್ಯಾಂಕ್‌ಆಫ್ ಬರೋಡದ ಮುಖ್ಯಕಾರ್ಯನಿರ್ವಾಹಣ ಅಧಿಕಾರಿ ಅರ್ಜುನ್‌ ರಾವ್, ಹಿರಿಯ ವ್ಯವಸ್ಥಾಪಕರಾದ ಜ್ಞಾನಶ್ರೀ ಅರ್ಜುನ್‌ ರಾವ್‌ ಕಾರ್ಕಳ ಮಾರುತಿ ಗ್ಯಾಸ್‌ ಏಜನ್ಸಿಯ ಮಾಲಕ ನಿತ್ಯಾನಂದ ಪೈ, ಕಾರ್ಕಳ ಗಾಯತ್ರಿಎಕ್ಸೋಟ್ ಬೋಳ ವಸುಂಧರಾ ಶ್ರೀನಿವಾಸ್‌ಕಾಮತ್, ಬೋಳ ಪ್ರಶಾಂತ್‌ಕಾಮತ್ , ಬೋಳ ಪ್ರಿಯಂವದಾ ಪ್ರಶಾಂತ್‌‌ ಕಾಮತ್ , ಶ್ರೀರಾಮ ವಿದ್ಯಾ ಕೆಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಹ ಸಂಚಾಲಕ ರಮೇಶ್‌ಎನ್, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ ಹಾಗೂ ಸಹ ಮುಖ್ಯೋಪಾಧ್ಯಾಯ ಸುಮಂತ್ ಆಳ್ವ ಎಮ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಶ್ರೀ ರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀರಘುರಾಜ್ , ಮಲ್ಲಿಕಾಆರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯಚಂದ್ರಶೇಖರ ಸಾಲ್ಯಾನ್ ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಚಿನ್ಮಯಿಎನ್ ಶೆಟ್ಟಿ ನಿರೂಪಿಸಿ, ಸುಶ್ಮಿತಾ ಭಟ್ ಸ್ವಾಗತಿಸಿ, ಭೂಮಿಕಾ ವಂದಿಸಿದರು.