‘ಕಾಂತಾರ’ ಚಿತ್ರದ ಮೂಲಕ ಕ್ರಾಂತಿ ಸೃಷ್ಟಿಸಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ , ರಾಯರ ಮೂಲ ಬೃಂದಾವನದ ಪವಿತ್ರ ದರ್ಶನ ಪಡೆದರು. ಈ ವೇಳೆ ರಾಯರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ರಿಷಬ್, ಕೆಲಸದ ಒತ್ತಡದ ನಡುವೆಯೂ ಸಮಯ ಮಾಡಿಕೊಂಡು ಕುಟುಂಬದೊಂದಿಗೆ ಮಂತ್ರಾಲಯ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ. ಕೇವಲ ದರ್ಶನ ಮಾತ್ರವಲ್ಲದೆ, ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಭೇಟಿ ಮಾಡಿ ಗುರುಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬಕ್ಕೆ ಶೇಷವಸ್ತ್ರ ಹೊದಿಸಿ, ಸ್ಮರಣಿಕೆ ಮತ್ತು ಫಲ ಮಂತ್ರಾಕ್ಷತೆ ನೀಡಿ ವಿಶೇಷವಾಗಿ ಆಶೀರ್ವದಿಸಿದರು.

ಸದ್ಯ ರಿಷಬ್ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ. ಈ ಬೃಹತ್ ಚಿತ್ರದ ಯಶಸ್ಸಿಗಾಗಿ ಮತ್ತು ಕುಟುಂಬದ ಏಳಿಗೆಗಾಗಿ ಅವರು ಮಂತ್ರಾಲಯ ರಾಯರ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಮಂತ್ರಾಲಯದ ಪವಿತ್ರ ಪರಿಸರದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಸರಳವಾಗಿ ಕಾಣಿಸಿಕೊಂಡ ರಿಷಬ್ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗುತ್ತಿವೆ. ರಾಯರ ಅನುಗ್ರಹ ಸದಾ ಇವರ ಮೇಲಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸ್ಟಾರ್ ಗಿರಿ ತಲೆಗೆ ಏರಿಸಿಕೊಳ್ಳದೆ, ಸಾಮಾನ್ಯ ಭಕ್ತನಂತೆ ರಾಯರ ದರ್ಶನ ಪಡೆದ ರಿಷಬ್ ಅವರ ಸರಳತೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ರಾಯರ ಕೃಪೆಯಿಂದ ರಿಷಬ್ ಅವರ ಮುಂದಿನ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಸದ್ದು ಮಾಡಲಿ ಎಂಬುದೇ ಕನ್ನಡಿಗರ ಆಶಯ.
