ಕೆ. ಎಸ್.‌ಹೆಗ್ಡೆ ಆಸ್ಪತ್ರೆಯ ಸಹಕಾರದೊಂದಿಗೆ ಕೃಷ್ಣಕುಮಾರ್ ಪೂಂಜ ಅವರು ಕಳೆದ 40 ವರ್ಷಗಳಿಂದ ಸೇವಾ ಕಾರ್ಯಕಮವನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಶಿವ ಕುಮಾರ್ ಪಿ. ಹೇಳಿದರು.

ಅವರು ಫೆ.5 ರಂದು ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ, ದವಸಧಾನ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷಯ ರೋಗಿಗಳು ಪೌಷ್ಟಿಕ ಆಹಾರವನ್ನು ಸೇವಿಸಿಕೊಂಡು ರೋಗ ಮುಕ್ತರಾಗಿ ಆರೋಗ್ಯವಂತ ಜೀವನ ನಡೆಸಬೇಕೆಂದು ತಿಳಿಸಿದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಕಳೆದ 17 ತಿಂಗಳಿನಿಂದ ಈ ಕಾರ್ಯಕ್ರಮವನ್ನು ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನಡಸಲಾಗುತ್ತಿದ್ದು, ಸುಮಾರು‌ 6 ಲಕ್ಷ ರೂಪಾಯಿ ಖರ್ಚು ಮಾಡಿ ಇದುವರೆಗೆ ಸುಮಾರು 98 ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ವಿತರಿಸಲಾಗಿದೆ ಎಂದರು.

ಬ್ಯಾಂಕ್ ಆಫ್ ಬರೋಡ ಅರ್ಕುಳ ಶಾಖೆಯ ಪ್ರಬಂಧಕ ಎಂ. ಪ್ರಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಸುನೀಲ್ ಫೆರ್ನಾಂಡೀಸ್ ಅಬ್ಬೆಟ್ಟು, ಪ್ರಮುಖರಾದ ಪ್ರಕಾಶ್ ಕಿದೆಬೆಟ್ಟು, ಸುರೇಶ್ ರೈ ಪೆಲಪಾಡಿ, ಸುಕುಮಾರ್ ಅರ್ಕುಳ, ವಿಕ್ರಂ ಬರ್ಕೆ, ಪ್ರಶಾಂತ್ ತುಂಬೆ,‌ ದಿನೇಶ್ ತುಂಬೆ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಟ್ರಸ್ಟಿಗಳಾದ ದೇವದಾಸ್ ಶೆಟ್ಟಿ ಕೊಡ್ಮಾಣ್ ಸ್ವಾಗತಿಸಿ, ವಂದಿಸಿದರು. ತೇವು ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.