ಚಿತ್ರದುರ್ಗ: ಹಿರಿಯೂರು ಬಳಿ ನಡೆದ ಸೀಬರ್ಡ್‌ ಬಸ್‌ ದುರಂತದಲ್ಲಿ (ಮೃತಪಟ್ಟ ಐವರ ಮೃತದೇಹದ ಗುರುತು ಡಿಎನ್‌ಎ ವರದಿಯಿಂದ ಪತ್ತೆಯಾಗಿದ್ದು, ಶವಗಳನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಡಿ.25ರಂದು ಬೆಂಗಳೂರಿನಿಂದ (Bengaluru) ಸೀಬರ್ಡ್‌ ಬಸ್‌ನಲ್ಲಿ ಗೋಕರ್ಣ ಶಿವಮೊಗ್ಗ ಹಾಗೂ ಕುಮಟಕ್ಕೆ ತೆರಳಲು ಒಟ್ಟು 32 ಜನ ಪ್ರಯಾಣಿಕರು ತೆರಳುತಿದ್ದರು. ಈ ಬಸ್‌ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ  ಗೊರ್ಲಡಕು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ (Accident) ಡಿಕ್ಕಿಯಾಗಿತ್ತು. ಪರಿಣಾಮ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು. ಇದನ್ನೂ ಓದಿ : ದಟ್ಟ ಮಂಜಿನಿಂದ ಹೆಚ್ಚಿದ ಅಪಘಾತ – 23 ದಿನದಲ್ಲಿ 75 ಆಕ್ಸಿಡೆಂಟ್, 33 ಮಂದಿ ಸಾವು

ಮೃತದೇಹ ಕರಕಲಾಗಿದ್ದು ಗುರುತು ಪತ್ತೆಯಾಗಿರಲಿಲ್ಲ. ಇದರಿಂದ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು, ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ.

ಮಾನಸ ಮತ್ತು ನವ್ಯ ಚಿಕ್ಕಂದಿನಿಂದಲೂ ಒಟ್ಟಾಗಿ ಬೆಳೆದಿದ್ದು, ಅವರ ಮದುವೆ ಫಿಕ್ಸ್ ಆಗಿತ್ತು. ಮುಂದಿನ ಬದುಕಿನ ಬಗ್ಗೆ ಅಪಾರ ಕನಸು ಕಂಡಿದ್ದರು. ಆದ್ರೆ‌ ವಿಧಿಯಾಟವೇ ಬೇರೆ ಆಗಿದೆ. ಇಂತಹ ಸಾವು ಯಾವ ಶತ್ರುಗಳಿಗೂ ಬರಬಾರದು. ಅವರ ಅಗಲಿಕೆಯ ದುಃಖದಿಂದ ಹೊರಬರಲು ಸಾದ್ಯವಾಗ್ತಿಲ್ಲ. ಒಟ್ಟಾಗಿ ಬೆಳೆದವರು, ಒಂದಾಗಿ ಕೊನೆಯುಸಿರು ಎಳೆದಿದ್ದಾರೆ. ಹೀಗಾಗಿ ಅವರ ಅಂತ್ಯಕ್ರಿಯೆಯನ್ನು ಚನ್ನರಾಯಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಒಟ್ಟಿಗೆ ಮಾಡ್ತೇವೆ ಎಂದು ನವ್ಯ ತಂದೆ ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಸಾವಿಗೀಡಾದ ರಶ್ಮಿ ಮಹಾಲೆ ಮೃತದೇಹವನ್ನು ಅವರ ಸಹೋದರ ವಿನಾಯಕಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಬೆಂಗಳೂರಿನ ಬಿಂದು ಹಾಗೂ ಅವರ ಪುತ್ರಿ ಗ್ರಿಯಾ ಮೃತದೇಹಗಳನ್ನು ಸಹ ಬಿಂದು ಪತಿ ದರ್ಶನ್ ಅವರಿಗೆ ಹಸ್ತಾಂತರಿಸಿದ್ದಾರೆ. ಮೃತದೇಹಗಳ‌ ಮೇಲಿನ ಚಿನ್ನಾಭರಣಗಳನ್ನು ಹಿರಿಯೂರು ಪೊಲೀಸರು ಹಸ್ತಾಂತರಿಸಿದ್ದಾರೆ.
ಈ ವೇಳೆ‌ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ರಶ್ಮಿ ಸಹೋದರ, ಯಾವ ಕಾರಣಕ್ಕೆ ಬಸ್ ದುರಂತ ಆಗಿದೆಯೆಂದು ಪತ್ತೆ ಆಗಬೇಕು. ಮುಂದೆ ಇಂತಹ ದುರ್ಘಟನೆ ನಡೆಯದಂತೆ ಕ್ರಮವಹಿಸಬೇಕು. ನನ್ನ ಸಹೋದರಿ ಬಗ್ಗೆ ಸೊಷಿಯಲ್ ಮಿಡಿಯಾದಲ್ಲಿ, ಮ್ಯಾನೇಜರ್ ಜೊತೆ ಗಲಾಟೆ ಮಾಡ್ಕೊಂಡು ರಜೆಗೆ ತೆರಳಿದ್ರು ಎಂದು ಸುಳ್ಳು ಪ್ರಚಾರ ಮಾಡಲಾಗ್ತಿದೆ. ಆದರೆ ಆಕೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕ್ರಿಸ್ ಮಸ್ ರಜೆ ಹಿನ್ನೆಲೆ ಊರಿಗೆ ಬರುತ್ತಿದ್ದಳೆಂದು ಸ್ಪಷ್ಟಪಡಿಸಿದ್ದಾರೆ.