ಮಂಗಳೂರು: ಕುಡಿದು ಅತೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾಂಗ್ರೆಸ್  ಮುಖಂಡ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನ  66ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.  ಇದನ್ನೂ ಓದಿ : ನರೇಗಾದಲ್ಲಿ ಭಾರೀ ಗೋಲ್ಮಾಲ್‌ – ಬಿಲ್ ಪಡೆಯಲು ಸೀರೆಯುಟ್ಟ ಯುವಕ

ಘಟನೆಯಲ್ಲಿ NSUI ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ, ಕದ್ರಿ ನಿವಾಸಿ ಅಮನ್ ರಾವ್ ಸಾವನ್ನಪ್ಪಿದ್ದು, ವಂಶಿ ಮತ್ತು ಆಶಿಕ್ ಗಂಭೀರವಾಗಿ ಗಾಯಗೊಂಡಿದ್ದಾರೆ

ಜೂ.17ರಂದು ಐದು ಜನ ಸೇರಿ ಮಧ್ಯರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ಗಂಟೆಗೆ 192 ಕಿ.ಮೀ ವೇಗದಲ್ಲಿ ತಲಪಾಡಿಯಿಂದ ಮಂಗಳೂರಿಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಫೋಕ್ಸ್ ವೇಗನ್ ಕಾರು ಅಪ್ಪಚ್ಚಿಯಾಗಿದೆ.

ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಓವರ್ ಸ್ಪೀಡ್ ಮತ್ತು ಡ್ರಿಂಕ್ ಅಂಡ್ ಡ್ರೈವ್ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ಸದ್ಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.