ಬಂಟ್ವಾಳ: ಶಿಷ್ಟಾಚಾರದಿಂದ ಹೊರತಾದ ಎಲ್ಲವೂ ಭ್ರಷ್ಟಾಚಾರವೆನಿಸುತ್ತದೆ. ಜೀವನದಲ್ಲಿ ಮೌಲ್ಯಗಳನ್ನು ಅನುಸರಿಸಿದಾಗಲೇ ಅದಕ್ಕೆ ಬೆಲೆ ಬರುವುದು ಎಂದು ಶ್ರೀ ಕೃಷ್ಣಮೂರ್ತಿ ಎನ್. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ. ಬಂಟ್ವಾಳ, ಅವರು ನುಡಿದರು.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಲೋಕಾಯುಕ್ತ ಇಲಾಖೆ, ನಗರ ಪೋಲೀಸ್ ಠಾಣೆ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ “ಜಾಗೃತಿ ಅರಿವು ಸಪ್ತಾಹ –2024” ಹಾಗೂ “ಹಿರಿಯ ನಾಗರಿಕರ ದಿನಾಚರಣೆ”ಯ ಪ್ರಯುಕ್ತ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ವಿದ್ಯಾಗಿರಿ ಬಂಟ್ವಾಳದಲ್ಲಿ ಆಯೋಜಿಸಿದ್ದ ‘ಕಾನೂನು ಅರಿವು ಕಾರ್ಯಕ್ರಮ’ದಲ್ಲಿ ಮಾತನಾಡಿದರು.
ವ್ಯಕ್ತಿಯ ಜನನದಿಂದ ಮರಣದವರೆಗೂ ಕಾನೂನಿನ ವ್ಯಾಪ್ತಿಗೊಳಪಡುತ್ತಾನೆ. ಅದರ ತಿಳುವಳಿಕೆ ಎಲ್ಲರಿಗೂ ಅಗತ್ಯವಾದುದು ಎಂದು ದಿವಾಕರ್ ಮುಗುಳಿಯ, ಉಪತಹಸೀಲ್ದಾರರು, ಬಂಟ್ವಾಳ ಇವರು ತಿಳಿಸಿದರು. ಮಕ್ಕಳಿಂದ ಪೋಷಕರವರೆಗೂ ಕಾನೂನಿನ ನೆರವನ್ನುತಾಲೂಕು ಕಾನೂನು ಸಮಿತಿ ನೀಡಲು ಸದಾ ಸಿದ್ಧವಿದೆ ಅದನ್ನುಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದು ಶ್ರೀಮತಿ ಹರಿಣಿ ಕುಮಾರಿ, ಸಹಾಯಕ ಸರ್ಕಾರಿ ಅಭಿಯೋಜಕರು, ತಾಲೂಕು ಕಾನೂನು ಸೇವೆಗಳ ಸಮಿತಿ ಇವರು ಕರೆನೀಡಿದರು.
ಶ್ರೀ ರಾಮಕೃಷ್ಣ, ಆರಕ್ಷಕ ನಿರೀಕ್ಷಕರು, ಬಂಟ್ವಾಳ ನಗರ ಪೋಲೀಸ್ ಠಾಣೆ ಅವರು ಮಾತನಾಡುತ್ತಾ ಅಪರಾಧಗಳು ನಡೆದಾಗ ಪಶ್ಚಾತ್ತಾಪ ಪಡುವುದಕ್ಕಿಂತ ಜಾಗೃತವಾಗಿದ್ದು ಅಪರಾಧಗಳಿಂದ ದೂರವಿರಬೇಕೆಂದು ನುಡಿದರು. ಬದಲಾವಣೆ ಶಿಕ್ಷೆ ನೀಡುವುದರಿಂದ ಆಗಬಾರದು ಅದು ಸ್ವಭಾವದಿಂದಲೇ ಆಗಬೇಕು ಎಂದು ಶ್ರೀ ಸುರೇಶ್ಕುಮಾರ್ ಪಿ, ಪೋಲೀಸ್ ನಿರೀಕ್ಷಕರು, ಲೋಕಾಯುಕ್ತ ಇಲಾಖೆ, ಮಂಗಳೂರು ವಿಭಾಗ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಕರೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸಾದ್ಕುಮಾರ್ರೈ, ಹಿರಿಯ ನ್ಯಾಯವಾದಿಗಳು, ಬಂಟ್ವಾಳ ಅವರು ಮಾತನಾಡುತ್ತಾ ಭ್ರಷ್ಟಾಚಾರ ಸದೃಢದೇಹಕ್ಕೆ ಬಂದಿರುವ ರೋಗವಿದ್ದಂತೆ. ಭ್ರಷ್ಟಾಚಾರರ ಹಿತವಾಗಿ ಕಾರ್ಯನಿರ್ವಹಿಸಿದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಸಲ್ಲಿಸದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್ಡಿ.ಎಮ್. ರವರು ರಾಷ್ಟ್ರೀಯ ಭದ್ರತೆ ಹಾಗೂ ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರವು ಮಾರಕವಾದುದು. ಭಾರತವನ್ನುಅಭಿವೃದ್ಧಿ ಹೊಂದಿದದೇಶವನ್ನಾಗಿ ಮಾಡುವುದು ನಮ್ಮಕೈಯಲ್ಲಿದೆ ಎಂದರು.