ಅನುಭವ ಮಂಟಪ- ಬಸವಾದಿ ಶರಣರ ವೈಭವ’ ರಥಯಾತ್ರೆಯು ಇಡೀ ರಾಜ್ಯದಲ್ಲಿ ಪ್ರಯಾಣ ಮಾಡಲಿದೆ. ಇದರಿಂದ ವಚನ ಸಾಹಿತ್ಯದ ಪರಿಚಯ, ಬಸವಣ್ಣನವರ ವಿಚಾರಗಳು ಹೆಚ್ಚು ಪ್ರಚಾರವಾಗುತ್ತದೆ
ಎಂದು ಸಿ.ಎಂ.ಸಿದ್ಧರಾಮಯ್ಯ ಹೇಳಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಇಂದು ಆಯೋಜಿಸಲಾಗಿದ್ದ ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮತ್ತು ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬಸವಣ್ಣನವರು ಸಮಾಜಕ್ಕಾಗಿ ಬದುಕಿದವರು. ಸಮಾಜದ ಬದಲಾವಣೆಗಾಗಿ ಬದುಕಿರುವವರೆಗೂ ಪ್ರಯತ್ನಿಸಿದರು. ಬಸವಣ್ಣನವರ ಅನುಭವ ಮಂಟಪ ಪರಿಕಲ್ಪನೆಯ ಮೂಲಕ 12 ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತು. ಇಲ್ಲಿ ಜನರ ಸಮಸ್ಯೆಗಳನ್ನು ಚರ್ಚಿಸಿ, ಅದಕ್ಕೆ ಪರಿಹಾರವನ್ನು ಕಂಡುಹಿಡಿದು, ಜಾರಿ ಮಾಡುತ್ತಿದ್ದರು. ಜಗತ್ತಿನ ಮೊದಲನೇ ಸಂಸತ್ತು ಇದಾಗಿತ್ತು. ಎಲ್ಲಾ ಧರ್ಮ, ಜಾತಿಯವರಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿತ್ತಲ್ಲದೇ ಅವರ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದಾಗಿತ್ತು.
ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಬಸವ ಕಲ್ಯಾಣದ ಪುನರುತ್ಥಾನ ಮಾಡಲು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಪುನರುತ್ಥಾನದ ಕೆಲಸವನ್ನು ಈ ಬಾರಿ ಪೂರೈಸಲಾಗುವುದು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆಯನ್ನು ಮಾಡಿದೆ. ಕೇವಲ ಘೋಷಣೆ ಮಾತ್ರವಲ್ಲ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಜಾರಿ ಮಾಡಿದ್ದು ನಾವು. ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿದವರು. ಸಮಾಜದಲ್ಲಿನ ಸಾಮಾಜಿಕ ರೋಗಗಳಿಗೆ ಪರಿಹಾರವನ್ನು ಸೂಚಿಸಿದ್ದು ಮಾತ್ರವಲ್ಲದೇ ನುಡಿದಂತೆ ನಡೆಯುವ ಹಾಗೂ ನಡೆದಂತೆ ನುಡಿಯುವ ಪ್ರಯತ್ನವನ್ನು ಮಾಡಿದರು ಎಂದರು.