ಭಾರತೀಯ ಮೂಲದ ವಿದ್ಯಾರ್ಥಿಗೆ ಭೇಷ್ ಎಂದ ಆಂಧ್ರ ಸಿಎಂ
ಅಮರಾವತಿ: 14 ವರ್ಷದ ಭಾರತೀಯ ಅಮೆರಿಕನ್ ವಿದ್ಯಾರ್ಥಿ ಹೃದಯ ಸಂಬಂಧಿ ಕಾಯಿಲೆ (Heart Disease) ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ (AI) ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು.. ಎನ್ಆರ್ಐ ವಿದ್ಯಾರ್ಥಿ ಸಿದ್ಧಾರ್ಥ್ ನಂದ್ಯಾಲ (Siddharth Nandyala) ಕೇವಲ 7 ಸೆಕೆಂಡುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಹಚ್ಚುವ ʻಸಿರ್ಕಾಡಿಯಾ-ವಿʼ (CircadiaV) ಎಐ ಆಧಾರಿತ ಆ್ಯಪ್ವೊಂದನ್ನ ಸಿದ್ಧಪಡಿಸಿದ್ದಾರೆ. ಅನಂತರಪುರದ ಮೂಲದ ಸಿದ್ಧಾರ್ಥ್ ಸದ್ಯ ಅಮೆರಿಕದ ಡಲ್ಲಾಸ್ ನಗರದಲ್ಲಿ ನೆಲೆಸಿದ್ದಾರೆ.
14ರ ವಿದ್ಯಾರ್ಥಿ ಕಂಡುಹಿಡಿದ ಈ ಆ್ಯಪ್ ಸ್ಮಾರ್ಟ್ ಫೋನ್ ಸಹಾಯದಿಂದ ಹೃದಯ ರಕ್ತನಾಳಗಳ ಕಾಯಿಲೆಯನ್ನು ಬಹುಬೇಗನೆ ಪತ್ತೆಹಚ್ಚುತ್ತದೆ. ಹೃದಯದ ಮಿಡಿತವನ್ನು ಗ್ರಹಿಸುತ್ತದೆ. ಶೇ.96ಕ್ಕಿಂತ ಹೆಚ್ಚು ನಿಖರತೆಯನ್ನು ಸೂಚಿಸುತ್ತದೆ. ಈಗಾಗಲೇ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆ ಸೇರಿದಂತೆ ಅಮೆರಿಕದಲ್ಲಿ 15,000ಕ್ಕೂ ಹೆಚ್ಚು ರೋಗಿಗಳು ಹಾಗೂ ಭಾರತದಲ್ಲಿ 700 ರೋಗಿಗಳಿಗೆ ಇದನ್ನು ಪರೀಕ್ಷಿಸಲಾಗಿದೆ. ಖುದ್ದು ಸಿದ್ಧಾರ್ಥ್ ಅವರೇ ಸ್ಮಾರ್ಟ್ ಫೋನ್ ಬಳಸಿ ರೋಗಿಗಳನ್ನು ಪರೀಕ್ಷಿಸಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿದ್ಧಾರ್ಥ್ ಅವರ ಈ ಸಾಧನೆ ತಿಳಿದ ನಂತರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu), ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಅವರು ಸಿದ್ಧಾರ್ಥ್ ನಂದ್ಯಾಲ ಅವರನ್ನ ಭೇಟಿಯಾಗಿ ಅಭಿನಂದಿಸಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮೊಂದಿಗೆ ಚರ್ಚಿಸಲು ಕೇಂದ್ರ ಸಚಿವಾಲಯಕ್ಕೆ ಆಹ್ವಾನಿಸಿದ್ದರು. ಸುಮಾರು ಅರ್ಧಗಂಟೆಗಳ ಕಾಲ ಸಿದ್ಧಾರ್ಥ್ ಜೊತೆಗೆ ಚರ್ಚೆ ನಡೆಸಿದರು. ಇಂತಹ ಪ್ರಯತ್ನಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದರು. ಜೊತೆಗೆ ಈ ರೀತಿ ಕೊಡುಗೆಗಳನ್ನು ನೀಡುವ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು.